Anant Vaidya

Anant Vaidya

Thursday, August 13, 2020

ಹೆಸರಿಗೂ ಪುರಾಣವೇ?

 

Kavita Gireesh

 

"ಹೆಸರಿಗೂ ಪುರಾಣವೇ"

      

ಪಕ್ಕದ ಮನೆಯಲ್ಲಿ ನಾಮಕರಣ

 

ನಾಮಕರಣ ಅಂತ ಪಕ್ಕದಮನೆ ನಾರ್ತ್ ಇಂಡಿಯನ್ ಫ್ಯಾಮಿಲಿಯವರು ಬೆಳ್ಳಂಬೆಳಗ್ಗೆ ಕರೆಯಲು ಬಂದಿದ್ದರು.

‘ನಮ್ಮ ಮನೆಗೆ ಲಕ್ಷ್ಮೀ ಬಂದಿದ್ದಾಳೆ’ ಅಂತ ತುಂಬಾ ಖುಷಿಯಾಗಿ ಹೇಳಿದರು. 

“ಸಿಯಾ, ನಾಮ ಸೋಛಾ ಹೈ, ಆಪ್ ಸಬ್ ಕೊ ಜರೂರ್ ಆನಾ ಹೈ’.. ಪಟ ಪಟ ಅಂತ  ಹೇಳುತ್ತಲೇ ಇದ್ದರು….

ಅವರ ಖುಷಿ ನೋಡಿ ನಮಗೂ ತುಂಬಾ ಸಂತೋಷವಾಯಿತು.  

ಮಗುವನ್ನು ನೋಡಬೇಕು ಅಂತ ಆಸೆನೂ ಆಯಿತು. ‘ಖಂಡಿತ ಬರ್ತೀವಿ’ ಅಂತ ಹೇಳಿದೆವು.

 

ಇವತ್ತೇ ನಾಮಕರಣ! ಹೋಗಿ ಬರಬೇಕು…

ಏನು ಉಡುಗೊರೆ ನೀಡಲಿ ಅಂತ ಯೋಚಿಸುತ್ತ ಸ್ನಾನಮುಗಿಸಿ ಬಂದೆ.

‘ನನಗೆ  ಆಫೀಸಿನಲ್ಲಿ ಮುಖ್ಯ ಮೀಟಿಂಗ್ ಇದೆ. ನೀನು ಹೋಗಿ ಬಾ, ನಾನು ಬರೋದು ಲೇಟ್ ಆಗತ್ತೆ’ ಎಂದು ನನ್ನ ಪತಿ ಹೇಳಿದ್ದರಿಂದ, ನಾನೊಬ್ಬಳೇ ನಾಮಕರಣಕ್ಕೆ ಹೋಗುವುದು ಅಂತ ತೀರ್ಮಾನ ಆಯಿತು.

ಬೇಗ ಹೋಗಿ ಬೇಗ ಬಂದು ಬಿಡಬೇಕು ಅಂದುಕೊಂಡು ಕಪಾಟಿನಿಂದ ಹಸಿರು ಬಣ್ಣದ ಸೌತ್ ಸಿಲ್ಕ್ ಸೀರೆ ತೆಗೆಯುವಾಗ  ಅನಿಸಿತು… ನಾರ್ತ್ ಇಂಡಿಯನ್ಸ್ ಇಷ್ಟು ಭಾರಿ ಸೀರೆ ಉಡುವುದಿಲ್ಲ, ಇಷ್ಟವನ್ನೂ ಪಡೋದಿಲ್ಲ. ಅಲ್ಲೇ ಪಕ್ಕದಲ್ಲಿದ್ದ ನೀಲಿ ಬಣ್ಣದ ಕಾಥಾ ಸ್ಟಿಚ್ ಸೀರೆ ಸಾಕು ಅಂತ ಅದನ್ನ ಉಟ್ಟಿಕೊಂಡು, ಒಂದೆಳೆ ಮುತ್ತಿನ ಸರ ಧರಿಸಿ ರೆಡಿಯಾಗಿ ಹೊರಟಾಗ ಹನ್ನೊಂದು ಘಂಟೆ!

 

ತುಂಬಾ ವಿಜೃಂಭಣೆಯ ನಾಮಕರಣ.

 

ಅವರು ಮನೆಯನ್ನೆಲ್ಲ  ತಿಳಿ ಗುಲಾಬಿ ಬಣ್ಣದಲ್ಲಿ ಅಲಂಕಾರ ಮಾಡಿದ್ದರು. ತೊಟ್ಟಿಲನ್ನಂತೂ ತುಂಬಾ ಶ್ರದ್ಧೆಯಿಂದ ಅಲಂಕರಿಸಿದ್ದರು. ತೊಟ್ಟಿಲಲ್ಲಿರುವ ಮಗು ತುಂಬಾ ಮುದ್ದಾಗಿತ್ತು. ರಾತ್ರಿಯೆಲ್ಲಾ ಎದ್ದಿತ್ತೇನೋ? ಈಗ ಇಷ್ಟು ಗಲಾಟೆಯಲ್ಲೂ ಶಾಂತವಾಗಿ ಮಲಗಿತ್ತು. ರಾತ್ರಿಯೆಲ್ಲಾ ಎಚ್ಚರವಿದ್ದು ಹಗಲಿಗೆ ಮಲಗುವ ಶಿಶು ಇರಬೇಕು!

 

ಸಿಯಾ ಅಲ್ಲ ದಿಯಾ!

 

ಮಗುವಿನ ಅಮ್ಮನಿಗೆ ನಾನು ತೆಗೆದು ಕೊಂಡು ಹೋದ ಉಡುಗೊರೆ ನೀಡಿ, ನನಗೆ ತಿಳಿದ ಅಲ್ಪ ಸ್ವಲ್ಪ ಹಿಂದಿಯಲ್ಲಿ ಏನು ಹೆಸರಿಟ್ಟಿದೀರಾ ಅಂತ ಕೇಳಿದೆ.  "ದಿಯಾ" ಅಂತ ಹೇಳಿದಳು… ‘ಒಹ್! ಬೇರೆ ಹೆಸರು ಇಟ್ಟಿದ್ದೀರಾ’? "ಸಿಯಾ ಅಂತ ಇಡ್ತೀವಿ ಅಂತ ನಿಮ್ಮ ಮನೆಯವರು ಕರೆಯಲು ಬಂದಾಗ ಹೇಳಿದ್ದರು. ಅದಕ್ಕೇ ಕೇಳಿದೆ” ಎಂದೆ. ನಮ್ಮ ದೇಶದಲ್ಲಿ ನಾವು ಅಪರಿಚಿತರಾದರೂ, ಬೇರೆ ದೇಶದಲ್ಲಿ ನಮ್ಮ ದೇಶದ ಜನರು ಯಾರಾದರೂ ಸ್ನೇಹಿತರೇ! ದೇಶದ ಕರುಳ ಬಳ್ಳಿ ಸೆಳೆಯದಿರುವುದೇ? ಸೌಜನ್ಯದ ಪ್ರೀತಿ ಉಕ್ಕೇರುವುದು ಸಹಜ ತಾನೇ? ಸುಖ-ದುಃಖ ಹಂಚಿಕೊಳ್ಳುವುದು ಇರುತ್ತದೆಯಲ್ಲವೇ? ಒಂದಿಷ್ಟು ಮಾತನಾಡಿದೆ.     

 

ಸಿಯಾ ಅಂದ್ರೆ ಸೀತೆಯ ಇನ್ನೊಂದು ಹೆಸರಂತೆ! ‘ಆ ಹೆಸರಿಟ್ಟರೆ ಮಗುವಿಗೆ ಸೀತೆ ಅನುಭವಿಸಿದಷ್ಟೇ ಕಷ್ಟ ಜೀವನದಲ್ಲಿ ಬರುತ್ತದೆ. ಅದಕ್ಕಾಗಿ ಆ ಹೆಸರು ಬೇಡ ಅಂದ್ರು’… ನಮ್ಮತ್ತೆ!! ಅದಕ್ಕೆ ‘ದಿಯಾ’ ಅಂತ ಹೆಸರು ಇಟ್ಟಿದೀವಿ ಅಂತ ನಗುತ್ತಾ ಹೇಳಿದಳು.

 

ಸ್ವ-ಯೋಚನಾ ಲಹರಿ…..

 

ಅವರು ಹೆಸರು ಬದಲಿಸಿದ, ಕಾರಣ ಕೇಳಿದಾಗ ನನ್ನ ಮನಸ್ಸು ಮೊದಲಿನಷ್ಟು ತಿಳಿಯಾಗಿರಲಿಲ್ಲ. ಊಟ ಮುಗಿಸಿ ಅವರ ಮನೆಯಿಂದ ವಾಪಾಸ್ ಬಂದರು… ಏನೋ ಗೊಂದಲ. ತಳಮಳ. ಹೇಳಿಕೊಳ್ಳಲಾಗದ ಭಾವಸ್ಪಂದನ…. ಮನದಲ್ಲೇನೋ ಸುನಾಮಿ, ಬಿರುಗಾಳಿ… ಯಾಕೋ ಆ ವಿಷಯ ತಲೆಯಿಂದ ಹೋಗುತ್ತಲೇ ಇರಲಿಲ್ಲ. 

 

ಮನಸ್ಸು ಅವರು ಮಾಡಿದ್ದು ಸರಿ ಅಂದರೆ… ಬುದ್ಧಿ ಯಾಕೋ, ‘ಹೆಸರಿನಿಂದ ಬದುಕಲ್ಲಿ ತೊಂದರೆಯೇ’ ಅಂತ ಪ್ರಶ್ನಿಸುತ್ತಿತ್ತು!… ಮನಸ್ಸು, ಬುದ್ಧಿ ಎರಡನ್ನು ಮೀರಿ ನನ್ನ ವಿಚಾರ ಮಾತ್ರ ಸೀತೆಯ ಜೀವನದ ಸುತ್ತ ಸುತ್ತುತ್ತಿತ್ತು…

 

ಭೂಮಿ ತೂಕದ ಹೆಣ್ಣೇ ಸೀತೆ!

 

ಮಹಾಮಾತೆ ಸೀತಾದೇವಿಯನ್ನು ‘ಭೂಮಿಯಲ್ಲಿ ಹುಟ್ಟಿ ಬಂದ ನೀನು ಭೂಮಿ ತೂಕದ ಹೆಣ್ಣೆಂದರು’!…. 

ಅವಳು ಆ ಮಾತು ಸುಳ್ಳಾಗದಿರಲೆಂದು ಪೂರ್ತಿ ಜೀವನವನ್ನು ಕಷ್ಟದಲ್ಲೇ ಕಳೆದಳೇನೋ…? ಭೂಮಿಯಂತೆ ಸಹನಾ ಜೀವಿಯಾದಳೇನೋ…? ತನ್ನ ಭಾವನೆಗಳನ್ನೇ ಕೊಂದು ಬದುಕಿದಳೇನೋ…?

 

ಭೂಮಿ ಊಳುವಾಗ ನೇಗಲಿನ ಸಾಲಿನಲ್ಲಿ ಸಿಕ್ಕ ಮಗು, ಜನಕ ಮಹಾರಾಜನ ಸಾಕು ಮಗಳು... ಆಗೇನೂ ತಿಳಿಯದ ಶಿಶು ಅವಳು.  ಆದರೆ  ಜನರ ಬಾಯಲ್ಲಿ ಅವಳ ಕಥೆ ಶುರುವಾಗಿತ್ತಲ್ಲ! ಬೆಳೆಯುತ್ತ, ಬೆಳೆಯುತ್ತ ಅದೆ ಕಥೆಯನ್ನೇ ತಾನೂ ಕೇಳುತ್ತ ಬೆಳೆದಳೇ? ಅರಮನೆಯ ಆ ಕಥೆಯನ್ನು ದಾಸಿಯರೆಲ್ಲ ಹೇಳುವುದು. ಅದು ಅವಳ ಕಿವಿಯನ್ನು ತಲುಪಿದಾಗ ಅವಳ ಮನಸ್ಸು ಭಾರವಾಗಿರಬಹುದೇ? ಅವಳ ಭೂಮಿ ತೂಕದ ಹೆಣ್ಣಿನ ಪಾತ್ರ ಅಲ್ಲಿಂದಲೇ ಶುರು ಆಗಿರಬಹುದೇ? ಸಹನಾ ಮೂರ್ತಿಯವಳು!

 

ಸೀತಾ ಕಲ್ಯಾಣ

 

ಸೀತೆಯ ಮದುವೆಯ ಸಂಭ್ರಮ... ಸೀತೆಗೂ ಅಷ್ಟೇ  ಹರ್ಷವಿತ್ತೇ? ಸೀತೆಯ ಗಂಡನಾಗುವವನು ಶಿವಧನಸ್ಸು ಹೆದೆಯೇರಿಸ ಬೇಕೆಂದು ಅವಳ ಅಪ್ಪ ಜನಕನು ಪಣವಿಟ್ಟಿದ್ದನಂತೆ! ಸ್ವಯಂವರ ಅವಳಿಗಿಷ್ಟ ಇತ್ತೇ? ಶಿವಧನಸ್ಸನ್ನು ಹೆದೆಯೇರಿಸಿ ಗೆದ್ದೆನೆಂದು ಬೀಗಲು, ತಾನೇ ಬಲಿಷ್ಠ, ವೀರ ಪ್ರಚಂಡನೆಂದು ತೋರಿಸಲು, ರಾವಣನಂಥ ಕ್ರೂರ ರಾಕ್ಷಸ  ಬಂದಿದ್ದನ್ನು ತಿಳಿದು ಅವಳ ಕೋಮಲ ಮನಸ್ಸು ಭಯ ಪಟ್ಟಿರಬಹುದೇ? ಅಲ್ಲಿಂದ ಅವಳಿಗೆ ಸಾಧ್ವಿಯ ಪಟ್ಟವೇ? ಸಾಧ್ವಿ ಎನ್ನುವುದು ಇತರರು ತೊಡಿಸುವ ಮುಖವಾಡವೇ?

 

ಸೀತಾರಾಮ ಕಲ್ಯಾಣ ಉತ್ಸವವಂತೆ..

 

ಸೀತೆಯನ್ನು ವರಿಸಲು ಪಣವಾಗಿ ಇಟ್ಟ ಶಿವ ಧನಸ್ಸನ್ನು ಹೆದೆಗೇರಿಸಲು ರಾಕ್ಷಸ ರಾವಣನಿಂದ ಸಾಧ್ಯವಾಗಲಿಲ್ಲ! ಬಂದ ಯಾವೊಬ್ಬ ಅರಸರಿಂದಲೂ ಪಣವನ್ನು ಗೆಲ್ಲಲು ಆಗಿಲ್ಲ! ಅದಷ್ಟರಿಂದ ಅವಳಿಗೆ ಎನೋ ತೃಪ್ತಿಯಾಗಿರ ಬಹುದೇ? ರಾಮನು ಶಿವಧನಸ್ಸನ್ನು ಹೆದೆಯೇರಿಸುವಾಗ ಮುರಿದನೆಂದು, ಪಂದ್ಯ ಗೆದ್ದನೆಂದು ಖುಷಿಯಲ್ಲಿದ್ದ ಸೀತೆಗೆ ಮತ್ತದೇ ಅವಳ ಹುಟ್ಟಿನ ಪ್ರಶ್ನೆ ಕಾಡಿತ್ತೆ? 

 

ದಶರಥ ಮಹಾರಾಜನು ಜನಕನ ಔರಸಪುತ್ರಿ  ಊರ್ಮಿಳೆಯನ್ನು ಲಕ್ಷ್ಮಣನಿಗೂ, ಜನಕನ ತಮ್ಮ ಕುಶಧ್ವಜನ ಮಕ್ಕಳಾದ ಮಾಂಡವಿಯನ್ನು ಭರತನಿಗೂ, ಶೃತಕೀರ್ತಿಯನ್ನು ಶತ್ರುಘ್ನನಿಗೂ ತಂದುಕೊಳ್ಳಲು ಒಪ್ಪಿದನಂತೆ! ಸೀತೆಯ ಮೂವರು ತಂಗಿಯರನ್ನು ಸೊಸೆಯಂದಿರನ್ನಾಗಿಸಿಕೊಳ್ಳಲು ದಶರಥನ ವಿರೋಧವಿಲ್ಲವಂತೆ! ಆದರೆ ಸೀತೆ ಔರಸ ಪುತ್ರಿಯಲ್ಲವಲ್ಲ!! ಜನಕನು ಸಾಕಿದ್ದಕ್ಕೆ ಇವಳು ಮಗಳು! ಅವರು ತಂಗಿಯರು!!

 

‘ನನ್ನ ರಾಮನಿಗೆ ಔರಸ ರಾಜಕುವರಿಯೇ ಬೇಕು. ಹುಟ್ಟಿನ ಮೂಲವಿಲ್ಲದ ಹೆಣ್ಣನ್ನು ನನ್ನ ರಾಮನ ಮಡದಿಯಾಗಿ ನಾನು ಸ್ವೀಕರಿಸಲಾರೆ’ ಎಂದು ಹೇಳಿದ್ದು ಸತ್ಯವಿರಬಹುದೇ?! ಅವಳು ಜನಕನ ಮಗಳಲ್ಲವೆಂದು ತಿರಸ್ಕರಿಸಿದ್ದು ಅವಳ ಬದುಕಿನಲ್ಲಿ ಆರದ ಮೊದಲ ಗಾಯವಾಗಿರಬಹುದೇ? ದಶರಥ ಹೀಗೆ ಹೇಳಿದನಂತೆ ಎಂಬ  “ಗಾಳಿಸುದ್ದಿ”ಯನ್ನು ಕೇಳಿ ಅವಳಿಗೆ ಉಸಿರು ಕಟ್ಟಿದಂತಾಗಿರಬಹುದೇ? ಕತ್ತನ್ನು ಹಿಚುಕಿದಂತಾಗಿರ ಬಹುದೇ?

 

ಮತ್ತೆ ಹೇಗೆ ಒಪ್ಪಿದ ದಶರಥ? ಕಡುಕೋಪಿ ವಿಶ್ವಾಮಿತ್ರನ ಭಯವೇ? ಆತನೇ ತೋರಿಸಿದ್ದ ಮಿಥಿಲೆಯ ದಾರಿಯನ್ನು! ವಿಶ್ವಾಮಿತ್ರನೇ ಜನಕನಿಗೆ ಹೇಳಿದ್ದ…. ‘ರಾಮನಿಗೆ ಶಿವಧನುವನ್ನು ತೋರಿಸು’ ಎಂದು! ‘ರಾಮನಿಗೆ ಶಿವಧನುವನ್ನು ಹೆದೆಯೇರಿಸು’ ಎಂದವನೂ ವಿಶ್ವಾಮಿತ್ರನೇ? ಹೆದೆಯೇರಿಸುವಾಗ ಶಿವಧನುವು ಮುರಿದು ಹೋಯಿತು. ಅದೇನು ಇಟ್ಟು-ಇಟ್ಟು ಗೆದ್ದಲು ಹಿಡಿದಿತ್ತೇ? ಏನಿದು ವಿಚಿತ್ರ!?

 

‘ಧನಸ್ಸು ಮುಟ್ಟುವ ಮೊದಲೇ ಅವಳ ಮದುವೆಯಾಗಲು ನಾನು  ಒಪ್ಪಿದಂತೆ, ಧನಸ್ಸು ಮುರಿದ ಮರುಕ್ಷಣ ಅವಳು ನನ್ನ ಪತ್ನಿ’ ಅಂದ ರಾಮ. ಮುದ್ದು ಮಗನ  ಮಾತಿಗೆ ಸೊಸೆಯೆಂದು ಒಪ್ಪಿಕೊಂಡನೇ ದಶರಥ?... ರಾಮ ಕರ್ತವ್ಯ, ಧರ್ಮ, ಕೊಟ್ಟ ಮಾತಿಗೆ ಬದ್ಧನಾಗಷ್ಟೇ ಮದುವೆಯಾದನೇ ಸೀತೆಯನ್ನು??? 

 

ಖುಷಿ ಪಡುವ ಸಮಯದಲ್ಲಿ ಹರ್ಷವ ತೋರಿಸದ, ಕೋಪದ ಸಮಯದಲ್ಲಿ  ಕೋಪವನ್ನೂ ತೋರಿಸದ ಎಲ್ಲ ಸಮಯದಲ್ಲೂ ನಿರ್ಲಿಪ್ತನಾಗಿರುವ ಮರ್ಯಾದಾ ಪುರುಷೋತ್ತಮ ಗಂಡನ ಜೊತಯಲ್ಲಿ ಸಲಿಗೆಯಿಂದಿರಲು ಸಾಧ್ಯವಿತ್ತೇ?? ರಾಮನೊಂದಿಗೆ ಅವಳು ಸರಸ ದಾಂಪತ್ಯವನ್ನು ನಡೆಸಿದ್ದಳೇ??

ಸರಸ ದಾಂಪತ್ಯವಿಲ್ಲದೇ ಸಂತೋಷದಿಂದ ಬಾಳಲು ಸಾಧ್ಯವೇ? ಹೇಗಿತ್ತೋ ಅವಳ ಆ ದಿನಗಳು?? 

ಮೌನಿಯಾಗಿರುವುದರಿಂದಲೇ ಅವಳನ್ನು ಎಲ್ಲರೂ  ಸರ್ವಗುಣಸಂಪನ್ನೆ ಎಂದರೇನೋ...?

 

ವನವಾಸದಲ್ಲೂ ಜೊತೆಯಾದವಳು..

 

 ‘ಭರತನಿಗೆ ಪಟ್ಟ, ರಾಮನಿಗೆ ಹದಿನಾಲ್ಕು ವರ್ಷ ವನವಾಸ’ ವಿಧಿಸಬೇಕೆನ್ನುವುದು ಕೈಕಯಿಯ ಹಟವಂತೆ… ಮಾವನಾದ ದಶರಥ ಕೊಟ್ಟ ಮಾತಂತೆ. ವಂಶದಲಿ ಕೊಟ್ಟ ಮಾತು ನೆಡೆಯಲೇ ಬೇಕೆಂದು ರಾಮ ವನವಾಸಕ್ಕೆ ಹೊರಟು ನಿಂತಾಗ, ಸೀತೆ ತಾನೂ ಗಂಡನ ಜೊತೆಯಾಗಿ ಹೋದಳು... ತನ್ನ ಸುಖದ ಸುಪ್ಪತ್ತಿಗೆಯ ತೊರೆದು ಗಂಡನ ಜೊತೆ ಹೊರಟ ಸೀತೆಗೆ ವನವಾಸದ ಕಷ್ಟ ತಿಳಿದಿರಲಿಲ್ಲವೇ? ವನ್ಯಮೃಗಗಳ, ಕ್ರೂರ ರಕ್ಕಸರ ನೆನೆದು ಹೆದರಲಿಲ್ಲವೇ ಅವಳ ಮನ??

 

ಲಕ್ಷ್ಮಣನ ಪತ್ನಿ ಊರ್ಮಿಳೆಯಂತೆ ಅರಮನೆಯಲ್ಲೇ ಉಳಿದಿದ್ದರೆ… ಸೀತೆಯನ್ನು ಸೀತಾಮಾತೆ ಅನ್ನುತ್ತಿರಲಿಲ್ಲವೇ ನಾವೆಲ್ಲ?? ಊರ್ಮಿಳೆಗೆ ಗಂಡನ ಸೇವೆ ಮಾಡುವ ಭಾಗ್ಯವೂ ತಪ್ಪಿತು. ಇತ್ತ ಮಾವನ ಸೇವೆ ಮಾಡುವ ಯೋಗವೂ ತಪ್ಪಿತು!

 

‘ರಾಮನೇನೋ  ಅಪ್ಪನ ಮಾತು ಉಳಿಸಲು ಹೋದ.. ಸೀತೆಯು ವೃದ್ಧ ಅತ್ತೆ, ಮಾವನ ಸೇವೆ ಮಾಡದೇ ಪತಿಯ ಜೊತೆಗೇಕೆ ಹೋದಳೋ’? ಎಂದು, ಜರಿದ ಜನರೂ ಇರಬಹುದೇ?? ಅದಕ್ಕೇ ಲಕ್ಷ್ಮಣ ಊರ್ಮಿಳೆಯನ್ನು ಅಯೋಧ್ಯೆಯಲ್ಲಿಯೇ ಬಿಟ್ಟು ಹೋದನೇ? ಭರತ, ಶತ್ರಘ್ನರೂ ಹೆಂಡತಿಯನ್ನು ಬಿಟ್ಟೇ ಉಳಿದರೇ?

 

 ಅಪಹರಿಸಿದನವಳ ಆ ಅಸುರ..

 

ಸುಂದರವಾಗಿದ್ದದ್ದು ಅವಳ ತಪ್ಪೇ? ಆ ರಾವಣ ಅವಳನ್ನು ನೋಡಿದ್ದು ಅವಳ ತಪ್ಪೇ? ಅವನು ಅಪ್ರತಿಮ ಸುಂದರಿ ಸೀತೆಯನ್ನು ಬಯಸಿದ್ದು ಅವಳ ತಪ್ಪೇ? ಬಲಿಷ್ಠ, ಕ್ರೂರಿ ಅವಳನ್ನು ಅಪಹರಿಸಿದರೆ ಅವಳೇನು ಮಾಡಲು ಸಾಧ್ಯವಿತ್ತು??

 

ಅಷ್ಟು ದಿನ ಅಸುರ  ರಾವಣನ ಬಂಧನದಲ್ಲಿದ್ದ ಸೀತೆಯ ಪಾವಿತ್ರ್ಯವನ್ನೇ ಸಂಶಯಿಸಿದ ರಾಮ!

‘ನಾನು ಸೂರ್ಯವಂಶದ ಮಾನವನ್ನು ಕಾಪಾಡಿದೆ. ನಿನ್ನನ್ನು ಕುಲದ ಮರ್ಯಾದಿಗಾಗಿ ಬಿಡಿಸಿದೆ. ನನ್ನ ಪರಾಕ್ರಮದಿಂದ ರಾವಣನನ್ನು ಕೊಂದೆ. ಭೂಮಂಡಲದಲ್ಲಿ ನಾನು ಮಾಡಬೇಕಾದ ಕರ್ತವ್ಯವನ್ನು ನೆರವೇರಿಸಿದೆ. ಇನ್ನು ನೀನು ನಿನ್ನ ಇಷ್ಟ ಬಂದಲ್ಲಿ ಹೋಗು’ ಎಂದನಂತೆ ರಾಮ!

 

 ಓಹೋ! ನನ್ನ ಬಿಡಿಸಿದ್ದು ಕುಟುಂಬ ಮರ್ಯಾದೆಗೆ! ಕರ್ತವ್ಯಕ್ಕೆ!! ವಿಶ್ವಾಸ, ನಂಬಿಗೆ, ಪತ್ನಿ ಎಂಬ ಪ್ರೀತಿಗಾಗಿ ಅಲ್ಲ! ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದ ಧಾರ್ಮಿಕ ಪ್ರಜ್ಞೆಗಾಗಿ ಅಲ್ಲ ಎಂದು ತಿಳಿದಾಗ ಅವಳಿಗಾದ ಸಂಕಟವೆಷ್ಟೋ??

 

ತನ್ನ ಪಾವಿತ್ರ್ಯ ಪರೀಕ್ಷೆಗೆ ಅಗ್ನಿಯನ್ನೇ ಪ್ರವೇಶಿಸಿದಳವಳು.. ಸತ್ತ ಮಾವ ದಶರಥನೇ ಪ್ರತ್ಯಕ್ಷವಾಗಿ ಸೀತೆ ಪವಿತ್ರಳು ಎಂದನಂತೆ! ಮೂವತ್ತುಮೂರು ಕೋಟಿ ದೇವಾನುದೇವತೆಗಳು ಸೀತೆಯ ಪಾವಿತ್ರ್ಯವನ್ನು ಕೊಂಡಾಡಿದರಂತೆ!!

 

ಅಗ್ನಿ ಸುಡದಿದ್ದರು… ಅವಳ ಆತ್ಮಗೌರವ ಅವಳನ್ನ ಸುಡದಿರಬಹುದೇ?? ಅವಳ ಹೃದಯಕ್ಕೆ ಆರದಗಾಯ ಆಗದಿದ್ದೀತೇ? ಏನೂ ಪ್ರಶ್ನೆ ಮಾಡದವಳು.  ಅಂದಿನಿಂದ ಅವಳು ಮಹಾಪತಿವ್ರತೆ..!!

 

ಗರ್ಭಿಣಿ ಪತ್ನಿಯನು ದೂರ ಅಟ್ಟಿದ ರಾಮ.

 

ನನ್ನನ್ನು ರಾವಣನ ಸೆರೆಯಿಂದ ಬಿಡಿಸಿ ಕರೆತಂದ ‘ನನ್ನ ರಾಮ’ ಎಂದು, ಸುಖ – ಸಂತೋಷ – ಆರೋಗ್ಯ -  ಆನಂದವಾಗಿಡಲು ಎಷ್ಟು ಪ್ರಯತ್ನಿಸಿರಬಹುದು?... ಹೆಣಗಾಡಿರಬಹುದು?... ಅಣ್ಣನ ಆಜ್ಞೆಯಂತೆ ಲಕ್ಷ್ಮಣನು ಗುರುಗಳ ಆಶ್ರಮದ ಸನಿಹ ಕರೆತಂದು ‘ಇಲ್ಲೇ ಇರು’ ಎಂದು ಬಿಟ್ಟು ಹೋದನಲ್ಲ..!!

 

ತುಂಬಾ ದಿನಗಳ ನಂತರವಷ್ಟೇ ಸೀತೆಗೆ ತಿಳಿಯಿತು… ರಾಮ ಅವಳನ್ನು ತ್ಯಜಿಸಿದ್ದಾನೆಂದು….. ‘ರಾವಣ ಅಪಹರಿಸಿದ ನನ್ನನ್ನು ಪವಿತ್ರಳು ಎಂದು ಅಯೋಧ್ಯಾ  ರಾಮನ ಪ್ರಜೆಗಳು ಒಪ್ಪಲಿಲ್ಲವಂತೆ! ಬಿಳಿವಸ್ತ್ರದ ಮೇಲೆ ಆದ ಕಪ್ಪಕಲೆಯೆಂದು ಹೇಳಿದರಂತೆ! ಅದೇ ನನ್ನನ್ನು ಬಿಡಲು ಕಾರಣವಂತೆ!..

 

ಕಾರಣ ತಿಳಿದು ಅವಳ ಹೃದಯ ಒಡೆದೇ  ಹೋಗಿರಬಹುದೇ?? ರಾಮ ಅವಳಿಗೆ ಕೊಟ್ಟ ಮಾತುಗಳು, ಅವಳ ಒಪ್ಪಿಗೆ, ಅವಳನ್ನು ಲಂಕೆಯಲ್ಲಿ ಒಳಪಡಿಸಿದ ಅಗ್ನಿಪರೀಕ್ಷೆಗೆ ಬೆಲೆಯೇ ಇರಲಿಲ್ಲವೇ?? ಅಗ್ನಿಯಲ್ಲಿ ಹಾರಿ ಪವಿತ್ರಳೆಂದು ಮೂರು ಲೋಕವು ಒಪ್ಪಿದ ಮೇಲೆ ಇದೆಂಥ ವರ್ತನೆ ಎಂದು ಸೀತೆ ಕೇಳಿದ್ದರೆ!…. ಅವಳಿಗೆ ನಾವೆಲ್ಲ ಮಹಾ ಪತಿವ್ರತೆ ಅಂತ ಪಟ್ಟ ಕೊಡುತ್ತರಿಲಿಲ್ಲವೇನೋ…?!

 

ತಾಯ್ತನವು ಸುಖವಂತೆ..

 

ಪತಿ ತ್ಯಜಿಸಿದ ಹೆಣ್ಣು ಅವಳು.  ರಾಮನ ಕುಡಿ ಅವಳ ಗರ್ಭದಲ್ಲಿ!!  ತಾಯಿಯಾಗುವ ಸಂಭ್ರಮವನ್ನು ಸಂಭ್ರಮಿಸಲಿಲ್ಲ ಅವಳು. ಹೆರಿಗೆಯ ಸಮಯದಲ್ಲಿ ಕಾಳಜಿ ತೋರಲು ತನ್ನವರಾರು ಇಲ್ಲ ಎಂದು ಎಷ್ಟು ನೊಂದಳೋ? ಬೆಂದಳೋ? ಆ ಮಹಾಸಾಧ್ವಿ??  ಹೆರಿಗೆಯ ನೋವಿನ ಉಸಿರಿನಲ್ಲಿ ಮನದ ನೋವಿನ ನಿಟ್ಟುಸಿರೆಷ್ಟೊ, ಗಂಗಾ ನದಿಯಲ್ಲಿ ಬೆರೆತು ಹರಿದು ಹೋದ ಕಣ್ಣೀರೆಷ್ಟೋ? ಹುಟ್ಟಿಸಿದ ಭೂಮಿತಾಯ ಮೇಲೆ ಇಂಗಿ ಹೋದ ಮನದ ನೋವಿನ ಕಣ್ಣೀರೆಷ್ಟೋ?

 

ಸೂರ್ಯವಂಶದ ಕುಡಿಯನ್ನು ಹೆರುವಾಗಲೂ, ದುಃಖದ ಕಣ್ಣೀರು ಆನಂದ ಭಾಷ್ಪ ಆಗಲೇ ಇಲ್ಲ!! ತವರಿನ ಸೀಮಂತವಿಲ್ಲ! ಸೇರಿದ ಮನೆಯ ಆನಂದೋತ್ಸವವಿಲ್ಲ! ಅಂತೂ ಎರಡು ಮಕ್ಕಳ ತಾಯಿ ಸೀತೆ… ಪರಿತ್ಯಕ್ತೆ !!

 

ಆಶ್ರಮಕ್ಕೆ ಶತ್ರುಘ್ನ

 

ಸೂರ್ಯವಂಶದಿಂದ ಪರಿತ್ಯಕ್ತಳು! ರಾಮನ ಹೃದಯದಿಂದ ಪರಿತ್ಯಕ್ತಳು!! ಅತ್ತೆಯರಿಂದ, ಅಯೋಧ್ಯೆಯ ಪ್ರಜೆಗಳಿಂದ, ಕುಲದಗುರು ವಶಿಷ್ಠರಿಂದ ಪರಿತ್ಯಕ್ತಳು ಎಂಬ ಭಾವನೆಯಲ್ಲೇ ಬೆಂದು ಹೋದಳೇ! ಅದರಲ್ಲಿಯೂ ಅಪವಿತ್ರಳು ಎಂಬ ಅಪವಾದ! ಸೀತೆ ಜೀವಂತ ಶವವಾಗಿದ್ದಳೇ? ನಡೆದಾಡುವ ಹೆಣವಾಗಿದ್ದಳೇ?

 

ಸಭೆಯಲ್ಲಿ ರಾಮನೊಬ್ಬನೇ ಸಿಂಹಾಸನದಲ್ಲಿ ಆಸೀನನಾಗಿದ್ದಾಗಲೂ, ಸೀತೆ ಎಲ್ಲಿ ಎಂದು ಯಾರೂ ಪ್ರಶ್ನಿಸಲಿಲ್ಲವಂತೆ!! ತನ್ನವರು, ತನ್ನ ಹಿರಿಯರು ಯಾರೂ ಸಪ್ತಪದಿಯನ್ನು ತುಳಿದ ಬಂದ ಸೊಸೆಯನ್ನು ನಂಬಲೇ ಇಲ್ಲವಲ್ಲ ಎಂದು ಎಷ್ಟು ಕೊರಗಿರಬಹುದು? ಸೂರ್ಯವಂಶದ ಹಿರಿಯರೆಲ್ಲ ‘ಸೀತೆಯನ್ನು ತಿರಸ್ಕರಿಸಿರುವುದು ಸರಿಯೇ’ ಎಂದು ಕುಲಗುರು ವಶಿಷ್ಠರೂ ಪ್ರಶ್ನಿಸಲಿಲ್ಲವಂತೆ!! ಸೂರ್ಯವಂಶದ ಕುಡಿಗಳನ್ನು ಹೆರಲು ವಾಲ್ಮೀಕಿಗಳ ಆಶ್ರಮವೇ ತವರಾಯ್ತೇ? 

 

ಮಕ್ಕಳ ಮುದ್ದು ಮುಖವನ್ನು ನೋಡುತ್ತಾ ಬದುಕಿನ ಬವಣೆಯನ್ನು ಮರೆಯ ಬೇಕೆಂದಿರುವಾಗ… ಲವ, ಕುಶರ ಜೊತೆ ಅವಳು ದುಃಖ ಮರೆಯುವ ಪ್ರಯತ್ನ ಪಡುತ್ತಿರುವಾಗಲೇ.. ಮಧು ಎಂಬ ರಾಕ್ಷಸನನ್ನು ಕೊಂದ ಮೈದುನ ಶತ್ರುಘ್ನ ವಾಲ್ಮೀಕಿಗಳ ಆಶ್ರಮಕ್ಕೆ ಬರಬೇಕೆ? ರಾಕ್ಷಸನನ್ನು ಕೊಂದ ಬಿಮ್ಮೋ? ಇಲ್ಲಾ ಎಲ್ಲರಿಂದ ಪರಿತ್ಯಕ್ತಳಾದ ಸೀತೆಯ ದುರಂತ ಸ್ಥಿತಿಯನ್ನು ನೋಡಿ ನಗಲು ಬಂದನೋ? ಎಂದು ನಿರ್ಣಯಿಸಲಾಗಲೇ ಇಲ್ಲ. ಬಿಟ್ಟು ಹೋದವರನ್ನು ಅವಮಾನ ಪಡಿಸುವುದೆಂದರೆ ಇದೇ ಏನೋ? ತಮ್ಮ ದೊಡ್ಡಸ್ಥಿಕೆಯನ್ನು ತೋರಿಸಲು ಒಂದಲ್ಲ ಒಂದು ನೆಪವನ್ನು ಹೊತ್ತು ಬರುವುದು…!

 

‘ಅತ್ತಿಗೆ ತಾಯಿಸಮಾನ’ ಎಂದು ಸಹಾಯಕ್ಕೆ ಬಂದವನಲ್ಲ! ಅಣ್ಣನನ್ನು ಒಪ್ಪಿಸಿ ಸೀತಾಮಾತೆಯನ್ನು ಕರೆದೊಯ್ಯಲು ಬಂದವನಲ್ಲ! ತಾಯಿಗೆ ಸಮಾನಳಾದ ಅತ್ತಿಗೆ ಇರುವಳಲ್ಲ ಎಂದು ಮಾತನಾಡಿಸಲು ಬಂದವನಲ್ಲ! ಗೌರವದಿಂದ ನಮಸ್ಕರಿಸಲು ಬಂದವನಲ್ಲ! ಆರೋಗ್ಯದಿಂದ ಇರುವೆಯಾ ಎಂದು ಕೇಳಲೂ ಬಂದವನಲ್ಲ! ಕೇಳಲೂ ಇಲ್ಲ!

 

ಬಂದವನಿಗೆ ವಾಲ್ಮೀಕಿ ಋಷಿಗಳು ನನ್ನ ಮಕ್ಕಳಾದ ಲವ-ಕುಶರಿಂದ ‘ರಾಮಚರಿತ’ವನ್ನು ಕೇಳಿಸಿದರು!! ಅರ್ಧ ಬರೆದಿಟ್ಟ ರಾಮಚರಿತವದು! ಸಂಪನ್ನ ಎಂದು ಮುಕ್ತಾಯ ಹಾಡದ ರಾಮಚರಿತವದು!!

 

ಅಶ್ವಮೇಧ ಯಾಗ

 

ಮರುದಿನ ಹೋಗುವಾಗ… ‘ರಾಮ ಅಶ್ವಮೇಧಯಾಗವನ್ನು ಮಾಡುವನು. ತಾವು ತಮ್ಮ ಶಿಷ್ಯರೊಂದಿಗೆ ಬರಬೇಕು. ರಾಮನ ಮುಂದೆ ಅವನ ಚರಿತೆಯನ್ನು ನಿಮ್ಮ ಶಿಷ್ಯರು ಹಾಡಬೇಕೆಂದು ಆಮಂತ್ರಣ ನೀಡಿದ’. ಅಲ್ಲೇ ತಿರುಗಾಡುತ್ತಿರುವ ಸೂರ್ಯವಂಶದ ಮಹಾರಾಣಿಗೆ ಆಮಂತ್ರಣವಿಲ್ಲ!

 

ವಾಲ್ಮೀಕಿಗಳು ಸೀತೆಗೆ ಆಶ್ರಯವನ್ನಿತ್ತರು! ಅವಳು ಮಕ್ಕಳನ್ನು ಹೆತ್ತುದು ಆಶ್ರಮದಲ್ಲಿ! ಆಶ್ರಮವೇ ಅವಳಿಗೆ ತವರ ಮನೆ! ಆಶ್ರಮದಲ್ಲಿ ಸೂರ್ಯವಂಶದ ಮಕ್ಕಳ ಜನನ! ವಾಲ್ಮೀಕಿಗಳ ಮಾತು ವೇದವಾಕ್ಯ.

 

ಆಮಂತ್ರಣವೇ ಇಲ್ಲ! ಆದರೂ ಅವಳಿಗೆ ವಾಲ್ಮೀಕಿ ಗುರುಗಳ ಒತ್ತಾಯ ತುಂಬಿದ ಆದೇಶದಂತೆ, ರಾಮ ಮಾಡುತ್ತಿರುವ ಅಶ್ವಮೇಧಯಾಗಕ್ಕೆ ಹೋಗಬೇಕಾಯಿತು…!! ಮುನಿಗಳೇ ಒತ್ತಾಯಿಸಿ ಒಯ್ಯುತ್ತಿರುವಾಗ, ತಮ್ಮಿಬ್ಬರನ್ನೂ ಒಟ್ಟುಗೂಡಿಸುವರು ಎಂಬ ಒಳ ಆಸೆಯೊಂದು ಇತ್ತೋ ಏನೋ? ನಗು-ನಗುವ ಸಂಸಾರದ ಬಂಗಾರದ ಕನಸ ಕಂಡಿದ್ದಳೇನೋ?

 

ಯಾಗಕ್ಕೆ ಹೋದ ಅವಳಿಗೆ ತನ್ನ ಜಾಗದಲ್ಲಿ ತನ್ನದೇ ಬಂಗಾರದ ಪುತ್ಥಳಿಯ ನೋಡಿ.. ಏನು ಅನಿಸಿರಲಿಕ್ಕಿಲ್ಲ?! ಪತ್ನಿ ಇಲ್ಲದವ ಯಾಗ ಮಾಡಬಾರದು. ಯಾಗ ಮಾಡಲು ಪತ್ನಿ ಬೇಕು!! ಆದರೆ ಪತ್ನಿಯೇ ಇಲ್ಲದೇ ಯಾಗ!? ಧರ್ಮವಂತೂ ಅಲ್ಲವೇ ಅಲ್ಲ! ಇದು ಯಾವ ರೀತಿಯ ಆಪದ್ಧರ್ಮ? ಅವಳಿಗೆ ಆ ಸನ್ನಿವೇಶವನ್ನು ಕಂಡು ಜಿಗುಪ್ಸೆ ಮೂಡಿರಬೇಕು.

 

‘ನೀನೊಂದು ಗೊಂಬೆ ಅಷ್ಟೇ’! ಎಂದು ಯಾಗ ಮಾಡುತ್ತಿದ್ದ ರಾಮನೇ ಕಿವಿಯಲ್ಲಿ ಬಂದು ಕೂಗಿದಂತಾಯಿತೇ!? 

 

ವಸಿಷ್ಠರು ಬೇರೆ ಮದುವೆ ಆಗೆಂದರೂ… ಬೇರೆ ಮದುವೆ ಆಗುವುದಿಲ್ಲ! ಆದರೆ ಅಶ್ವಮೇಧ ಮಾಡಬೇಕು ಎಂದನಂತೆ ರಾಮ. ಏಕಪತ್ನಿ ವ್ರತಸ್ಥ ಎಂಬ ಬಿರುದು ಹೋಗಬಾರದು. ಆದರೆ ಪರಿತ್ಯಕ್ತ ಸೀತೆಗೆ ಸ್ಥಾನವಿಲ್ಲ! ಮಾನವೂ ಇಲ್ಲ! ಸಂಶಯಪಟ್ಟವರಿಗೆಲ್ಲ ಚಿನ್ನದ ಸೀತಾಕೃತಿ ಮಾನ್ಯವೇ ಆಯಿತು! ಇದೆಂಥ ಧರ್ಮಾಚರಣೆ! ಪತಿವ್ರತೆಯ ಮನವು ಪ್ರಶ್ನೆಯಿಂದ ಜರ್ಝರಿತವಾಗದೇ ಉಳಿದೀತೇ?!

 

ವಾಲ್ಮೀಕಿ ಮುನಿಗಳು ‘ಶ್ರೀರಾಮ ಸೀತೆ ಪರಿಶುದ್ಧಳು! ಪತಿವ್ರತೆ!! ಸ್ವೀಕರಿಸು’ ಎಂದಾಗ… ಅವಳಿಗೆ ಯಾಗದಲ್ಲಿ ಇರಲೇ ಬೇಕಾದ ಪತ್ನಿಯ ಸ್ಥಾನ ಮತ್ತೆ ರಾಮ ಕೊಟ್ಟರೆ ಎಂಬ ಆಸೆ ಸೀತೆಗೆ ಜನಿಸಿತ್ತೇ??  ಜೀವನದಲ್ಲಿ ಮತ್ತೆ ಗಂಡ - ಮಕ್ಕಳ ಜೊತೆ ಬಾಳುವ ಕನಸು ಅರಳಿತ್ತೇ?? 

 

ವಾಲ್ಮೀಕಿ ಮಹಾಮುನಿಗಳು ‘ರಾಮ! ಸೀತೆ ಪರಿಶುದ್ಧಳು. ಲವ-ಕುಶರು ನಿನ್ನ ಮಕ್ಕಳು. ಸ್ವೀಕರಿಸು’ ಎಂದಾಗ ರಾಮ ಒಪ್ಪಲಿಲ್ಲ! ಮುನಿಗಳ ಮಾತಿಗೂ ಮಾನ್ಯತೆ ಕೊಡಲಿಲ್ಲ!

 

ರಾಮನೆಂದ ‘ಸೀತೆ ಪವಿತ್ರಳು’ ಎಂದು ಸೇರಿದ ಗಣ್ಯರ ಮುಂದೆ ತೋರಿಸಲಿ… ಎಂದಾಗ ಅವಳ ಮನಸ್ಸು ಛಿದ್ರ-ಛಿದ್ರವಾಗದೇ ಉಳಿದಿತ್ತೇ? ಇಲ್ಲಿಗೇ ಇದಕ್ಕೆ ಪೂರ್ಣವಿರಾಮ ಬೀಳುವುದಿಲ್ಲ! ತವರ ಮನೆಯಲ್ಲಿ, ಮೈದುನರ ಮಾವನ ಮನೆಗಳಲ್ಲಿ, ಎಲ್ಲೇ ಅಪಸ್ವರ ಜನಿಸಿತು ಎಂದಾದರೆ… ಪುನಃ ನನ್ನನ್ನು ಪತಿವ್ರತಾ ಪರೀಕ್ಷೆಗೆ ಒಳಪಡಿಸದೇ ಬಿಟ್ಟಾನೆಯೇ ರಾಮ? ಅಗ್ನಿಸಾಕ್ಷಿಯಾಗಿ ಸಪ್ತಪದಿಯನ್ನು ತುಳಿದ ರಾಮನೇ ಅಗ್ನಿಗೇ ದೂಡಿರಲಿಲ್ಲವೇ? ಸಾಕು…. ಸಾಕು…. ಈ ಬವಣೆ ಎಂದೆನಿಸದೇ ಇದ್ದೀತೆ ಪವಿತ್ರ ಸೀತೆಗೆ?

 

ಮರಳಿ  ತಾಯಿಗರ್ಭಕ್ಕೆ!!  

 

'ಜೀವನದಲ್ಲಿ ಮತ್ತೆ ಕಂಡ ಗಂಡ ರಾಮ' ಎನ್ನುವ ಕಲ್ಪನೆ ಕಳಚಿ ಬಿದ್ದ ನಂತರವಷ್ಟೇ ತಿಳಿಯಿತೇನೋ ಅವಳಿಗೆ ತನಗಿರುವುದು ಪತಿ ರಾಮನಲ್ಲ.. ಇರುವುದು ರಾಜಾರಾಮ… ಕರ್ತವ್ಯಬದ್ಧ ರಾಮ…  ಧರ್ಮನಿಷ್ಠ ರಾಮ… ಸತ್ಯಸಂಧ ರಾಮ… ಪಿತೃವಾಕ್ಯ ಪರಿಪಾಲಕ ರಾಮ… ಪ್ರಜೆಗಳ ಪ್ರೀತಿಯ ರಾಮ…. 

       

ಆಗಲೇ ಸೀತೆಗೆ ಯಾರಿಗೂ ಕಾಣದ, ಎಂದಿಗೂ ಬಾರದ ಭೂಮಿಯೊಳಗೆ ಸೇರಿ ಹೋಗುವ ಮನಸ್ಸಾಯಿತೇನೋ... ಆಗ ಸೀತೆಗೆ ಏನು ಅನಿಸಿರಬಹುದೋ ಗೊತ್ತಿಲ್ಲ...! ಪದೇ – ಪದೇ ಪರೀಕ್ಷೆಗೆ ಒಳಪಡುವುದಕ್ಕಿಂತಲೂ ಸೀತೆ ಪವಿತ್ರಳು ಎಂದು ಮೂರುಕಾಲದಲ್ಲಿಯೂ ಸ್ಥಿರವಾಗಿರುವಂತೆ ಮಾಡಬೇಕೆಂದು ಮಕ್ಕಳನ್ನೂ ತ್ಯಾಗ ಮಾಡಲು ಸಿದ್ಧಳಾದಳು! ಗಟ್ಟಿ ಬೀಜವಾದಳು! ಯಾರಿಂದಲೂ ತಾಯಿಯ ಗರ್ಭದಿಂದ ಬಂದ ಮೇಲೆ ಪುನಃ ತಾಯಿಯ ಗರ್ಭವನ್ನು ಸೇರಲಾಗುವುದಿಲ್ಲ! ಸೀತಾಮಾತೆ ಭೂತಾಯ ಗರ್ಭವನ್ನು ಸೇರಿದಳು!! ರಾಮನ ಬದುಕಿನಲ್ಲಿ ದೀರ್ಘ ಪ್ರಶ್ನೆಯಾದಳು! ರಾಮನಿಗೆ ಬಿಡಿಸಲಾರದ ಪ್ರಶ್ನೆಯಾದಳು! ಉತ್ತರವೇ ಇಲ್ಲದ ಪ್ರಶ್ನೆಯಾದಳು! ರಾಮನ ವರ್ತನೆಯನ್ನೇ ಸದಾ ಪ್ರಶ್ನಿಸುವ ಪರಿಪೂರ್ಣ ಪ್ರಶ್ನೆಯಾದಳು!!.....  ಪ್ರಜೆಗಳಿಗೆ, ಅತ್ತೆಯಂದಿರಿಗೆ, ಕುಲಗುರುಗಳಿಗೆ, ಸಂಶಯಿಸಿದ ಎಲ್ಲರಿಗೂ ಬೆಂಬಿಡದ ಪ್ರಶ್ನೆಯಾದಳು!!

 

ಸೀತೆಯ ಹೆಸರಿಡಬಾರದೇ?

       

ಆದರೆ ಸೀತೆಯ ಹೆಸರೇ ಬೇಡ ಅನ್ನುವಷ್ಟು ಅವಳ ಬದುಕು ಕಷ್ಟ ಹಾಗೂ ಗೊಂದಲಗಳ ಗೂಡಾಗಿತ್ತೇ? ಪತಿಗೆ ಏನಾದರೂ ತೊಂದರೆ ಕೊಟ್ಟಳೇ? ಅಯೋಧ್ಯೆ ಅವಳ ಕಾಲ್ಗುಣದಿಂದಲೇ ಗೊಂದಲದ ಗೂಡಾಗಿತ್ತೇ? ಅದೂ ಗೊತ್ತಿಲ್ಲ... ಅವಳ ಹೆಸರನ್ನು ಇಟ್ಟರೆ ಅವಳ ಎಲ್ಲಾ ಕಷ್ಟ, ದುಃಖಗಳ ತಾಪ ನಮ್ಮನ್ನೂ ತಟ್ಟಿ ಬಿಡಬಹುದೇ?? 

 

ಸೀತಾಳ ಬದಲು ದೀಯಾ ಎಂದು ಹೆಸರಿಟ್ಟರಲ್ಲ! ಆ ಹೆಸರಿನಲ್ಲಿ ಏನೂ ದೋಷವೇ ಇಲ್ಲವೇ? ದೀಯಾ ಎಂದರೆ ಬೆಳಕು, ಕೊಡುವುದು ಎಂದು ಅರ್ಥವಿದೆ. ‘ನಮ್ಮಲ್ಲಿರುವುದನ್ನೆಲ್ಲಾ ಕೊಡುವುದು’ ಎಂದರ್ಥವಲ್ಲವೇ? ಎಲ್ಲವನ್ನೂ ಕೊಟ್ಟ ಮೇಲೆ ಉಳಿಯುವುದು ಏನು? ಕಷ್ಟವೇ ಅಲ್ಲವೇ? ಬೆಳಕು ಕತ್ತಲೆಯನ್ನು ಹೋಗಲಾಡಿಸುವುದು. ಕತ್ತಲೆ ತುಂಬಿದ ಬದುಕಿಗೆ ಬೆಳಕು ಆರಿ ಹೋದರೆ? ಪ್ರತಿ ಹೆಸರಿಗೂ ಒಂದು ಒಳ್ಳೆಯ ಅರ್ಥ, ಇನ್ನೊಂದು ಅಪಾರ್ಥವನ್ನು ಕಲ್ಪಿಸಬಹುದು ಅಲ್ಲವೇ?

 

ಕೆಲವು ಪ್ರಶ್ನೆಗಳಿಗೆ ಮನಸ್ಸಿಗೊಪ್ಪುವ ಉತ್ತರ ಸಿಗುವುದು ತುಂಬಾ ಕಷ್ಟ..

ಅಂತ ಪ್ರಶ್ನೆಗಳನ್ನ ಯಾವುದೋ ಉತ್ತರಗಳಿಂದ ಸಮಾಧಾನ ಪಡಿಸಿಕೊಳ್ಳಬೇಕು.. ಪಟ್ಟುಕೊಳ್ಳಬೇಕು.

ಅಮೃತ ಹೆಚ್ಚಾದರೆ ವಿಷವಂತೆ! ಅಮೃತಕ್ಕೆ ವಿಷ ಬೆರೆಸಿದರೆ ಅಮೃತವೇನು ವಿಷವಾಗುವುದೇ?! ಮತ್ತೆ ಅದನ್ನು ಅಮೃತವೆಂದು ಕರೆಯುವುದೇಕೆ? ತಿನ್ನುವ ಅನ್ನವೂ ಅಮೃತವಾಗಲಿ ಎಂದು ಆಶಿಸುವವನಿಗೆ ಆಹಾರ ದೋಷವೆನ್ನುವುದೇಕೆ? ಸದಾ ಅಮೃತವೇ ಬೇಕೆಂದರೆ ಸಿಗುವುದೇ? ಹಾಗೆಯೇ ಈ ಪ್ರಶ್ನೆಗಳು…

ಪ್ರಶ್ನೆಗಳನ್ನು ಪ್ರೆಶ್ನೆಗಳಾಗಿಯೇ ಇರಲು ಬಿಡಬೇಕು ಅಂದು ಕೊಳ್ಳುತ್ತಾ ರಾತ್ರಿ ಊಟದ ತಯಾರಿ ಮಾಡಲು ಅಡುಗೆ ಮನೆಗೆ ಹೊರಟೆ… ಹೆಸರಿಡಲು ಇಷ್ಟೊಂದು ದೊಡ್ಡ ಪುರಾಣ ಬೇಕಿತ್ತೇ? ನಗುತ್ತಿತ್ತು ನನ್ನ ಮನಸ್ಸು….

 

 

ನನ್ನ ಪರಿಚಯ

 

ಅಂದ ಹಾಗೆ ನಾನು ನಿಮಗೆ ನನ್ನ ಪರಿಚಯ ಹೇಳಲೇ ಇಲ್ಲ! ನಾನು "ಜಾನಕಿ" ಅಂತ…. 

ನಿಲ್ಲಿ ನಿಲ್ಲಿ… ಹಾಗೆಲ್ಲ ಯೋಚಿಸ ಬೇಡಿ. ನನ್ನ ಜೀವನದಲ್ಲಿ ಸೀತೆಯ ಬಾಳಿನ ಕಷ್ಟಗಳು, ಪ್ರಶ್ನೆಗಳು, ಯಾವುದೂ ಇಲ್ಲ.

 

ತುಂಬಾ ಪ್ರೀತಿಸುವ ಒಳ್ಳೆಯ ಪತಿ, ಖುಷಿಯಾದ ಸಂತೃಪ್ತ ಜೀವನ ನನ್ನದು. ಸೀತೆಯಂತೆ ಅವಳಿ - ಜವಳಿ ಗಂಡು ಮಕ್ಕಳಿದ್ದಾರೆ… ಅವರಿಗೆ ಮದುವೆ ಮಾಡಲು ವಧು ಬೇಕು. ಹೆಸರು ಏನೇ ಇದ್ದರೂ ತೊಂದರೆ ಇಲ್ಲ. ಸೀತಾ, ಸಿಯಾ, ಮೈಥಿಲಿ, ವೈದೇಹಿ, ಭೂಮೀಜಾ.....

 

ಕವಿತಾ ಗಿರೀಶ.

ಶಾರ್ಜಾ. ಯು. ಏ. ಇ.

 

email: kvthegde@gmail.com

c\o

Anant Vaidya

Post: Balagimane

Yellapur-581359-Uttara Kannda

email: anantvaidyayellapur@gmail.com

 

No comments:

Post a Comment

ಹೆಸರಿಗೂ ಪುರಾಣವೇ?

  Kavita Gireesh   "ಹೆಸರಿಗೂ ಪುರಾಣವೇ"        ಪಕ್ಕದ ಮನೆಯಲ್ಲಿ ನಾಮಕರಣ   ನಾಮಕರಣ ಅಂತ ಪಕ್ಕದಮನೆ ನಾರ್ತ್ ಇಂಡಿಯನ್ ಫ್ಯಾಮಿಲಿಯವರು ಬೆ...