'ವಿಜಯವಾಣಿ' ದಿನಪತ್ರಿಕೆಯನ್ನು ಓದಿ. ಜ್ಞಾನವನ್ನು ಹೆಚ್ಚಿಸಿಕೊಳ್ಳಿ.
ಕೃತಜ್ಞತೆಗಳು: ವಿ. ಆರ್. ಎಲ್ ಮೀಡಿಯ, ಸಂಪಾದಕರು, ವ್ಯವಸ್ಥಾಪಕ ಸಂಪಾದಕರು, ಸಹ ಸಂಪಾದಕರು ಹಾಗೂ ತಂತ್ರಜ್ಞರಿಗೆ.
************************
ನಮನ: ಓದುಗ ದೇವರಿಗೆ
******************************
************************
ಶಿಲ್ಪಿ ಮಹಾನ್ ತಪಸ್ವಿ!
******************************
ಒಂದು ಬಿಡಿಸಲಾರದ ಕಗ್ಗಂಟಿದೆ. ಅದುವೇ ಶಿಲ್ಪವನ್ನು ಕೆತ್ತಿ ಮೂರ್ತಿ ಮಾಡುವ ಶಿಲ್ಪಗಾರನಿಗೆ ಏಕೆ ಮಾನ್ಯತೆ ಸಿಗುವುದಿಲ್ಲ!? ದೇವಸ್ಥಾನಗಳಲ್ಲಿ ಹಣ ಕೊಟ್ಟವರನ್ನು ಫಲಕದಲ್ಲಿ ಕೆತ್ತುವರು, ಯಜಮಾನನ ಹೆಸರನ್ನು ಕೆತ್ತುವರು! ಪುರೋಹಿತರ ಹೆಸರನ್ನು, ಆಗಮಶಾಸ್ತ್ರಜ್ಞನ ಹೆಸರನ್ನು, ಸರಕಾರದಿಂದ ನಮ್ಮ ಹಣವನ್ನೇ ದೇವಾಲಯಗಳಿಗೆ ಕೊಡಿಸುವ ಮಂತ್ರಿಗಳ ಹೆಸರನ್ನು ಕೆತ್ತಿಸುವರು, ಆದರೆ ಎಲ್ಲೆಡೆಯೂ ಶಿಲ್ಪಿಗಳ ಹೆಸರನ್ನು ಮಾತ್ರ ಉಲ್ಲೇಖಿಸುವುದಿಲ್ಲ!!
ಗಣಪತಿ ಹಬ್ಬದ ಮಣ್ಣಿನ ಮೂರ್ತಿಯಿಂದ ಹಿಡಿದು ದೇವಾಲಯದಲ್ಲಿ ಕೂರಿಸುವ ಏಳು ಇಂಚಿನ ಮೂರ್ತಿಯವರೆಗೂ ಶಿಲ್ಪಿ ತಂದು ಕೊಡುವನು. ಮುಂದಿನ ಯಾವ ಕಾರ್ಯಗಳಿಗೂ ಆತನ ಪ್ರವೇಶವೇ ಇಲ್ಲ! ಶಿಲ್ಪಿಗೆ ಶಾಲು ಹೊದಿಸಿ ಹಣವನ್ನು ನೀಡಿ ಸಾಗು ಹಾಕುವರು. ವಿಶ್ವಕರ್ಮ ಜನಾಂಗದವರೂ ಬ್ರಾಹ್ಮಣರೇ ಎನ್ನುವುದನ್ನು ಶ್ರೀ ಮತ್ತೂರು ಕೃಷ್ಣ ಮೂರ್ತಿಯವರು ಹೇಳಿರುವರು. ಹಾಗಿದ್ದರೂ ಏಕೆ ಈ ತಾರತಮ್ಯ?
ದೇವಾಲಯಗಳ ನಿರ್ಮಾಣದ ಒಂದು ಶಾಸ್ತ್ರವಾದ ತಂತ್ರ ಸಮುಚ್ಚಯದಲ್ಲಿ ಶಿಲ್ಪಿಗಳಿಗೆ ಮಾನ್ಯತೆಯೇ ಇಲ್ಲ. ಪುರೋಹಿತನು ಶಿಲ್ಪಿಯನ್ನು ಆರಿಸುವನು ಎಂದಷ್ಟೇ ಇದೆ! ಶಿಲ್ಪವನ್ನು ಆರಿಸುವವನು, ಸ್ಥಳವನ್ನು ಆರಿಸುವವನು, ಸ್ಥಳಶುದ್ಧಿಯನ್ನು ಮಾಡುವವನು, ಪ್ರಾಣಪ್ರತಿಷ್ಠೆಯನ್ನು ಮಾಡುವವನು ಆಚಾರ್ಯನೇ!! ಶಿಲ್ಪದ ಗುಣ – ಧರ್ಮವನ್ನು ತಿಳಿದು ಆರಿಸುವ ಶಿಲ್ಪಿಗೆ ಶಿಲ್ಪವನ್ನೇ ತಿಳಿಯದ ಪುರೋಹಿತನು ಪೂಜಿಸಿ ಕೊಡುವುದೆಂದರೆ ಆಶ್ಚರ್ಯವಾಗುವುದು. ಸ್ಥಪತಿ ಕಷ್ಟ ಪಡುವವನಾದರೂ ಯಜಮಾನ, ಆಚಾರ್ಯ ಪೂರ್ಣವಾದ ಹೊಣೆಯನ್ನು ಹೊರುವರು!
ಶಿಲ್ಪಿಗೆ ಅನೇಕವಾದ ಕಟ್ಟು-ನಿಟ್ಟುಗಳು ಇರುತ್ತವೆ. ದೂರದೃಷ್ಟಿ ಅವನ ಉಸಿರಾಗಿರುತ್ತದೆ. ಶಿಲ್ಪದಿಂದ ಹೊರಡುವ ನಾದದಿಂದಲೇ ಆತ ಶಿಲೆಯ ಗುಣ–ದೋಷಗಳನ್ನು ಕಂಡು ಹಿಡಿಯಬಲ್ಲ. ದೈವಿಕತೆಯ ಎಲ್ಲ ರಹಸ್ಯವನ್ನು ಬಲ್ಲವನಾಗಿರುವನು. ಅದರ ಸೂಕ್ಷ್ಮತೆಯನ್ನು ತನ್ನ ಶಿಲ್ಪದಲ್ಲಿ ಕೆತ್ತಬಲ್ಲ! ಆಗ ಶಿಲ್ಪಕ್ಕಿಂತಲೂ ಶಿಲ್ಪಿಯೇ ಶ್ರೇಷ್ಠತಮನಾಗಿ ನಿಲ್ಲುವನು. ನಿಮಗೇ ಗೊತ್ತಿದೆಯಲ್ಲ! ಅಮರಶಿಲ್ಪಿ ಜಕಣಾಚಾರಿ ಅತ್ಯಂತ ನಾಜೂಕಾದ ಹಲವಾರು ದೇವಾಲಯಗಳನ್ನು ನಿರ್ಮಿಸಿ ದಂತಕಥೆಯಾದ ಶಿಲ್ಪಿ. ಇವನು ಕಲ್ಯಾಣ ಚಾಲುಕ್ಯರ ಹಾಗೂ ಹೊಯ್ಸಳರ ಶೈಲಿಯ ದೇವಾಲಯಗಳನ್ನು ಬೇಲೂರು ಹಾಗೂ ಹಳೇಬೀಡಿನಲ್ಲಿ ನಿರ್ಮಿಸಿದ್ದಾನೆ.
ಕರ್ನಾಟಕದ ತುಮಕೂರಿನಿಂದ ೯ ಕಿ.ಮೀ ದೂರದಲ್ಲಿರುವ ಕೈದಾಳೆ[ಕ್ರೀದಾಪುರ]ಯಲ್ಲಿ ಜಕಣಾಚಾರಿ ಜನಿಸಿದ. ಮದುವೆಯಾದ ಮೇಲೆಯೇ ಹಲವಾರು ದೇವಾಲಯಗಳನ್ನು ನಿರ್ಮಿಸುತ್ತ ಮುನ್ನಡೆದನು. ಶಿಲ್ಪ ಕಲೆಯ ತನ್ಮಯತೆಯಲ್ಲಿ ತನ್ನ ಹೆಂಡತಿಯ, ಮಗನನ್ನು ಸಹ ತಮ್ಮ ಕೆಲಸದಲ್ಲಿ ಮರೆತನು.
ಜಕಣಾಚಾರ್ಯನ ಮಗನ ಹೆಸರು ಡಂಕಣಾಚಾರ್ಯ. ಡಂಕಣಾಚರ್ಯನು ಆತನ ತಂದೆಯನ್ನು ಹುಡುಕುವುದಕ್ಕಾಗಿ ತಾನೇ ಒಬ್ಬ ಪ್ರಖ್ಯಾತ ಶಿಲ್ಪಿಯಾಗಿ ಬೆಳೆದನು. ಬೇಲೂರಿನಲ್ಲಿ ಅವನು ಶಿಲ್ಪಿಯ ಕೆಲಸಕ್ಕಾಗಿ ನೇಮಿಸಲ್ಪಟ್ಟನು, ಮಹಾನ್ ಶಿಲ್ಪಿ ಜಕಣಾಚಾರಿ ನಿರ್ಮಿಸಿದ ಒಂದು ಶಿಲ್ಪದಲ್ಲಿ ಕಲ್ಲಿನ ಪೊಟರೆಯಲ್ಲಿ ನೀರಿನಲ್ಲಿ ಬದುಕಿರುವ ಕಪ್ಪೆಯಿತ್ತು! ಇದರಿಂದ ಕೋಪಗೊಂಡ ಜಕಣಾಚಾರ್ಯರು ಅವರು ಕೆತ್ತಿದ ಶಿಲ್ಪದಲ್ಲಿ ದೋಷವಿದ್ದರೆ ತನ್ನ ಬಲಗೈಯನ್ನು ಕತ್ತರಿಸಿಕೊಳ್ಳುವುದಾಗಿ ಆ ಯುವಶಿಲ್ಪಿಗೆ ಮಾತನ್ನಿತ್ತನು. ಆ ಶಿಲ್ಪವನ್ನು ಪರೀಕ್ಷಿಸಿದ ನಂತರ, ಆ ದೋಷವಿರುವುದು ನಿಜವೆಂದು ಗೊತ್ತಾಗಿ ಜಕಣಾಚಾರ್ಯನು ತನ್ನ ವಾಗ್ದಾನದಂತೆ ತಮ್ಮ ಬಲಗೈಯನ್ನು ಕತ್ತರಿಸಿಕೊಂಡನು. ಕೊನೆಯಲ್ಲಿ, ಆ ಇಬ್ಬರು ಶಿಲ್ಪಿಗಳು ತಂದೆ, ಮಗನೆಂಬ ಸಂಬಂಧವನ್ನು ತಿಳಿದುಕೊಂಡರು. ಅದರ ನೆನಪಿಗಾಗಿಯೇ ಕಪ್ಪೆ ಚೆನ್ನಿಗರಾಯ ದೇವಸ್ಥಾನದ ಮೂರ್ತಿಯನ್ನು ಅಪ್ಪ-ಮಗ ಕೂಡಿ ಕೆತ್ತಿದರು.
ಶಿಲ್ಪಿಗಳು ಸೂಕ್ಷ್ಮತೆಯ ಆಗರ. ಧರ್ಮಸ್ಥಳದಲ್ಲಿ ಸ್ಥಾಪಿಸಿದ ಬಾಹುಬಲಿ ವಿಗ್ರಹವನ್ನು ನಾವು ಕೆತ್ತನೆಯ ಸಂದರ್ಭದಲ್ಲಿ ಶಾಲಾ ಪ್ರವಾಸಕ್ಕೆ ಹೋದಾಗ ನೋಡಿದ್ದೆವು. ಕೆತ್ತುತ್ತಿರುವ ಶಿಲೆಯ ಮೇಲೆ ಭಕ್ತಿಪೂರ್ವಕವಾಗಿ ಏರಲು ಹೇಳಿದ್ದರು. ಮೂರ್ತಿಯನ್ನು ಕೆತ್ತಿದ ರೆಂಜಾಳ ಗೋಪಾಲ ಶೆಣೈ ಕಾರ್ಕಳದವರು!
ಕಾರ್ಕಳ ಸಮೀಪದ ಮಂಗಳಪಾದ ಎಂಬಲ್ಲಿ 100 ಅಡಿ ಎತ್ತರ, 48 ಅಡಿ ಅಗಲದ ಬಂಡೆ ಗುರುತಿಸಿದರು. ಕಾರ್ಕಳದ ಶ್ರೀ ಗೋಮಟೇಶ್ವರ ಮೂರ್ತಿಯಂತೆ ಧರ್ಮಸ್ಥಳದ ಮೂರ್ತಿಯೂ ಬಯೋಟೈಟ್ ಹಾಗೂ ಕ್ವಾಟ್ಜ್ì ಖನಿಜಗಳ ಪಟ್ಟಿ ಮಿಶ್ರವಾಗಿರುವ ಸೀಣೆ ಜಾತಿಯ ಗಡಸು ಕಗ್ಗಲ್ಲಿನಿಂದ ಮಾಡಲ್ಪಟ್ಟಿದೆ. ಕೆತ್ತಿ –ಕೆತ್ತಿ ನೂರು ಅಡಿಯ ಕಲ್ಲು 39 ಅಡಿ ಎತ್ತರವಾಯಿತು.
ಶಿಲ್ಪವನ್ನು ಕೆತ್ತ ಬೇಕಾದರೆ ಶಿಲ್ಪಿ ತಪಸ್ಸನ್ನು ಮಾಡುವನು! ದೊಡ್ಡ – ದೊಡ್ಡ ಶಿಲೆಯನ್ನು ಕೆತ್ತಬೇಕಾದರೆ ಅದರ ಮೇಲೆ ಹತ್ತಲು ಜಪವನ್ನು ಮಾಡುವರು. ನಿಷ್ಠೆ ಅವರಿಗೆ ಇರಲೇ ಬೇಕಾದ ಗುಣಗಳು. ಉಳಿ-ಸುತ್ತಿಗೆಯ ಶಾಸ್ತ್ರೀಯ ಕೈಚಳಕ ಅಗಾಧವಾದುದು. ಅದಕ್ಕೆ ಏಕಾಗ್ರತೆ ಬೇಕು. ಭಾವ ಮತ್ತು ಬುದ್ಧಿಗಳ ವಿದ್ಯುದ್ ಆಲಿಂಗನಬೇಕು. ತ್ಯಾಗ, ಸಮರ್ಪಣೆ ಬೇಕು. ಶಿಲ್ಪಿ ಅದ್ವೈತ, ವಿಶಿಷ್ಠಾದ್ವೈತ, ದ್ವೈತಗಳ ಸಂಗಮ. ಆತನಿಗೆ ತಾರ ತಮ್ಯವಿಲ್ಲ! ತನ್ನ ಕಾರ್ಯಕೌಶಲ್ಯದಲ್ಲಿ ಮೋಸ ಮಾಡುವುದಿಲ್ಲ. ಮೂರ್ತಿ ಮತ್ತು ಕಲಾಕೌಶಲ್ಯದ ಕೆತ್ತನೆಗೆ ಶಿಲ್ಪಿಗಳ ಸಾಹಸ-ಸಹಾಯ ಅತ್ಯಮೂಲ್ಯವಾದುದು.
ಬಾಹುಬಲಿಯ ಬೃಹತ್ ಏಕಶಿಲಾ ಮೂರ್ತಿಯನ್ನು ಸಾಗಿಸಿದ್ದು ಸಹ ರೋಚಕ ಗಾಥೆ! ಕಾರ್ಕಳದಿಂದ 69 ಕಿ. ಮಿ. ಅಂತರದಲ್ಲಿ ಧರ್ಮಸ್ಥಳ. ಮುಂಬೈನ ಮಂಗತ್ ರಾಮ್ ಸಂಸ್ಥೆ ಈ ಬಾಹುಬಲಿ ವಿಗ್ರಹ ಸಾಗಾಟದ ಜವಾಬ್ದಾರಿ ಹೊತ್ತಿತ್ತು. ಮಾಲೀಕ ದೀನನಾಥ ಜಬಾನ್ ಈ ಸಂಸ್ಥೆಯ ಮಾಲೀಕನಾಗಿದ್ದನು. ಅದಕ್ಕಾಗಿ ದೈತ್ಯ ಗಾತ್ರದ ಟ್ರ್ಯಾಲಿ ಹಾಗೂ ಅದಕ್ಕೆ ಪೂರಕವಾಗಿರುವ ಟಯರ್-ಗಳ ನಿರ್ಮಾಣ ಮಾಡಲಾಗಿತ್ತು! 64 ಗಾಲಿಗಳುಳ್ಳ 20 ಟನ್ ಭಾರದ, 40 ಅಡಿ ಉದ್ದದ ಟ್ರ್ಯಾಲಿ ಅದಾಗಿತ್ತು. ಅದಕ್ಕೆ 170 ಟನ್ ಭಾರದ ಮೂರ್ತಿಯನ್ನು ಏರಿಸಿದ್ದು ಮಾತ್ರ ಸನ್ನೆತಂತ್ರದಿಂದ. ಅದನ್ನು ಏರಿಸುವಾಗಲೂ ನಾನಲ್ಲಿರುವುದು ವಿಶೇಷ ಅನುಭವವೇ!
ಶಿಲ್ಪಿ ಕಷ್ಟದಿಂದ ನಿರ್ಮಿಸಿದ ಮೂರ್ತಿಯನ್ನು ಒಯ್ಯುವ ಕಷ್ಟದ ಚಿಂತನೆಯನ್ನು ಮಾಡಬೇಕು. ಇದಕ್ಕಿಂತಲೂ ಪೂರ್ವದಲ್ಲಿ ನಮ್ಮ ಹಿರಿಯರು ಸುರಂಗವನ್ನು ತೋಡುವ, ಸ್ಥಳದಲ್ಲಿಯೇ ಕೆತ್ತಿದ ಬೃಹತ್ ಶಿಲಾಮೂರ್ತಿಯನ್ನು ನಿಲ್ಲಿಸುವ, ಸಾಗಿಸುವ ಕಾರ್ಯವನ್ನು ಹೇಗೆ ಮಾಡಿರಬಹುದು? ಬರೆದಿಡದ ಈ ಐತಿಹಾಸಿಕ ಕಾರ್ಯ ಅತ್ಯಂತ ವಿಸ್ಮಯಕಾರಿಯಲ್ಲವೇ?
ವೈಜ್ಞಾನಿಕ ಮನಸ್ಸಿದ್ದವನಿಗೆ ಇವುಗಳನ್ನು ನಂಬುವ ಮನಸ್ಥಿತಿ ಇರುವುದಿಲ್ಲ. ಆದರೆ ಇದು ಸತ್ಯ ಸಂಗತಿ. ಹಳೆಯದೆಲ್ಲವೂ ಅಮೃತವೆಂದು ತಿಳಿಯ ಬೇಕಾದುದಿಲ್ಲ! ಹಾಗಂತ ಹೊಸದೆಲ್ಲವೂ ಸರ್ವಗ್ರಾಹ್ಯವೂ ಅಲ್ಲ. ಕಣ್ಣು ಕಂಡುದನ್ನು ವಿಶ್ಲೇಷಿಸೋಣ. ಅದಕ್ಕೊಂದು ಸುಂದರ ರೂಪವನ್ನು ಕೊಡಲು ಪ್ರಯತ್ನಿಸೋಣ.
ಚಿತ್ರಕೃಪೆ: ಅಂತರ್ ಜಾಲ.
ಚಿತ್ರಗಳು: ಬೇಲುರು ಚೆನ್ನ ಕೇಶವ 2] ದೇವಸ್ಥಾನ 3] ಶುಕಭಾಷಿಣಿ 4] ಹಳೆಬೀಡು 5] ಹಳೆಬೀಡು 6] ಅಮರಶಿಲ್ಪಿ ಜಕ್ಕಣಾಚಾರಿ